ಓಂ ಬಿರ್ಲಾರವರು ಒಬ್ಬ ಭಾರತೀಯ ರಾಜಕಾರಣಿ. ಇವರು ೧೭ನೇ ಲೋಕಸಭೆಯ (ಪ್ರಸ್ತುತ) ಸ್ಪೀಕರ್. ರಾಜಸ್ಥಾನ ರಾಜ್ಯದ ಕೋಟ-ಬುಂಡಿ ಕ್ಷೇತ್ರದಿಂದ ೧೬ನೇ ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿ ಪ್ರವೇಶಿಸಿದರು. ಅವರು ಕೋಟಾ ದಕ್ಷಿಣದಿಂದ ಮೂರು ಬಾರಿ ರಾಜಸ್ಥಾನ ವಿಧಾನಸಭೆಯ ಸದಸ್ಯರಾಗಿದ್ದಾರೆ. ೧೭ನೇ ಲೋಕಸಭೆಯಲ್ಲಿ ಅದೇ ಕ್ಷೇತ್ರದಿಂದ ಎರಡನೇ ಬಾರಿಗೆ ಗೆದ್ದು ಬಂದರು. ಅವರು ೧೯ ಜೂನ್ ೨೦೧೯ರಂದು ಲೋಕಸಭಾ ಸ್ಪೀಕರ್ ಹುದ್ದೆಗೆ ಆಯ್ಕೆಯಾದರು. = ಆರಂಭಿಕ ಜೀವನ = ಓಂ ಬಿರ್ಲಾರವರು ನವೆಂಬರ್ ೨೩ ೧೯೬೨ರಂದು ಶ್ರೀಕೃಷ್ಣ ಬಿರ್ಲಾ ಮತ್ತು ದಿವಂಗತ ಶಕುಂತಲಾ ದೇವಿ ದಂಪತಿಗೆ ಜನಿಸಿದರು. ಸರ್ಕಾರಿ ವಾಣಿಜ್ಯ ಕಾಲೇಜು ಕೋಟಾ ಮತ್ತು ಮಹರ್ಷಿ ದಯಾನಂದ್ ಸರಸ್ವತಿ ವಿಶ್ವವಿದ್ಯಾಲಯ, ಅಜ್ಮೀರ್ ನಿಂದ ಸ್ನಾತಕೋತ್ತರ ಪದವಿ ಪಡೆದರು. = ರಾಜಕೀಯ ಜೀವನ = == ವಿಧಾನ ಸಭೆ == ಓಂ ಬಿರ್ಲಾರವರು ೨೦೦೩ರಲ್ಲಿ ದಕ್ಷಿಣ ಕೋಟಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಾಂತಿ ಧಾರಿವಾಲ್ ಅವರನ್ನು ೧೦,೧೦೧ ಮತಗಳ ಅಂತರದಿಂದ ಸೋಲಿಸಿದರು. ೨೦೦೮ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ನ ತಮ್ಮ ಹತ್ತಿರದ ಅಭ್ಯರ್ಥಿ ರಾಮ್ ಕಿಶನ್ ಶರ್ಮಾರನ್ನು ೨೪,೩೦೦ ಮತಗಳ ಅಂತರದಿಂದ ಸೋಲಿಸಿ ತಮ್ಮ ಸ್ಥಾನವನ್ನು ಸಮರ್ಥಿಸಿಕೊಂಡರು. ಸಂಸತ್ ಸದಸ್ಯರಾಗುವ ಮೊದಲು ಅವರು ತಮ್ಮ ಮೂರನೇ ವಿಧಾನಸಭಾ ಚುನಾವಣೆಯಲ್ಲಿ ಪಂಕಜ್ ಮೆಹ್ತಾ (ಕಾಂಗ್ರೆಸ್) ವಿರುದ್ಧ ಜಯಗಳಿಸಿದರು. ೨೦೦೩-೦೮ರ ಅವರ ಅಧಿಕಾರಾವಧಿಯಲ್ಲಿ, ರಾಜಸ್ಥಾನ ಸರ್ಕಾರದ ಸಂಸದೀಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. == ಲೋಕಸಭೆ == ಕೋಟಾ ಕ್ಷೇತ್ರದಿಂದ ೧೬ ಮತ್ತು ೧೭ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸತ್ ಸದಸ್ಯರಾಗಿ ಪ್ರವೇಶಿಸಿದರು. ಸಂಸತ್ತಿನಲ್ಲಿ ಇಂಧನ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು. ಅದಲ್ಲದೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅರ್ಜಿಗಳ ಸಲಹಾ ಸಮಿತಿಯ ಸದಸ್ಯರಾಗಿದ್ದರು. ಅವರು ೧೭ನೇ ಲೋಕಸಭೆಯ ಸ್ಪೀಕರ್ ಆಗಿದ್ದಾರೆ. == ಲೋಕೋಪಕಾರಿ ಕೆಲಸಗಳು == ಸಕ್ರಿಯ ಸಂಸದರಾಗಿ ಮತ್ತು ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವುದರ ಹೊರತಾಗಿ ಅವರು ಹಲವಾರು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಎಂದರೆ ೨೦೧೨ರಲ್ಲಿ ಪ್ರಾರಂಭವಾದ 'ಪರಿಧನ್', ಸಮಾಜದ ದುರ್ಬಲ ವರ್ಗದವರಿಗೆ ಬಟ್ಟೆ ಮತ್ತು ಪುಸ್ತಕಗಳ ವಿತರಣೆ, ರಕ್ತದಾನ ಶಿಬಿರಗಳು ಒಳಗೊಂಡಿರುತ್ತದೆ. ಉಚಿತ ಊಟದ ವ್ಯವಸ್ಥೆಯ ಕಾರ್ಯಕ್ರಮ ಮತ್ತು ಅಗತ್ಯವಿರುವ ಔಷಧಿಗಳನ್ನು ಬಡವರಿಗೆ ಉಚಿತವಾಗಿ ಪೂರೈಸಲು ಔಷಧಿ ಬ್ಯಾಂಕ್ ಅನ್ನು ಸಹ ಅವರು ಪ್ರಾರಂಭಿಸಿದ್ದಾರೆ. == ನಿಭಾಯಿಸಿದ ಪ್ರಮುಖ ಜವಾಬ್ದಾರಿಗಳು == ಜಿಲ್ಲಾಧ್ಯಕ್ಷರು, ಭಾರತೀಯ ಜನತಾ ಯುವ ಮೋರ್ಚಾ, ಕೋಟಾ. (೧೯೮೭-೧೯೯೧) ರಾಜ್ಯಾಧ್ಯಕ್ಷರು, ಭಾರತೀಯ ಜನತಾ ಯುವ ಮೋರ್ಚಾ, ರಾಜಸ್ಥಾನ ರಾಜ್ಯ. (೧೯೯೧-೧೯೯೭) ರಾಷ್ಟ್ರೀಯ ಉಪಾಧ್ಯಕ್ಷರು, ಭಾರತೀಯ ಜನತಾ ಯುವ ಮೋರ್ಚಾ. (೧೯೯೭-೨೦೦೩) ಉಪಾಧ್ಯಕ್ಷರು, ರಾಷ್ಟ್ರೀಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತ. ಅಧ್ಯಕ್ಷರು, ಕಾನ್ಫೆಡ್(), ಜೈಪುರ. (ಜೂನ್ ೧೯೯೨ ರಿಂದ ಜೂನ್ ೧೯೯೫ ರವರೆಗೆ) ಲೋಕಸಭಾ ಸ್ಪೀಕರ್, (೧೯ ಜೂನ್ ೨೦೧೯ - ಈಗಿನವರೆಗೆ) = ಉಲ್ಲೇಖಗಳು =